ಅಂಕೋಲಾ : 11ನೇ ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ಫೆ.25 ರಂದು ನಾಡವರ ಸಭಾಭವನದಲ್ಲಿ ನಡೆಸಲು ನಿರ್ಧರಿಸಲಾಗಿದೆ.ಸೋಮವಾರ ತಹಶೀಲ್ದಾರ್ ಕಚೇರಿಯಲ್ಲಿ ಉಪತಹಶೀಲ್ದಾರ್ ಗಿರೀಶ ಬಾನಾವಳಿಕರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು,ಸಮ್ಮೇಳನದ ವೇದಿಕೆಗೆ ವೃಕ್ಷಮಾತೆ ದಿ. ತುಳಸಿ ಗೌಡ ಹೆಸರನ್ನು ಇಡಲು ನಿರ್ಧರಿಸಲಾಗಿದೆ.

ಸಮ್ಮೇಳನಕ್ಕಾಗಿ ಸಮಿತಿ ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ ಶಾಸಕ ಸತೀಶ ಸೈಲ್, ಅಧ್ಯಕ್ಷರಾಗಿ ತಹಶೀಲ್ದಾರ್ ಅನಂತ ಶಂಕರ್, ಕಾರ್ಯಾಧ್ಯಕ್ಷರಾಗಿ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ನ್ಯಾಯವಾದಿ ನಾಗಾನಂದ ಬಂಟ್, ಸಿಪಿಐ ಚಂದ್ರಶೇಖರ ಮಠಪತಿ, ಬಿಇಓ ಮಂಗಲಲಕ್ಷ್ಮಿ ಪಾಟೀಲ್, ಸಿಡಿಪಿಒ ರಾಘವೇಂದ್ರ ಭಟ್ಟ, ಕಾರ್ಯದರ್ಶಿಯಾಗಿ ಕಸಾಪ ಕಾರ್ಯದರ್ಶಿಗಳಾದ ಜಗದೀಶ ನಾಯಕ ಹೊಸ್ಕೇರಿ, ಜಿ.ಆರ್. ತಾಂಡೇಲ್ ನೇಮಕಗೊಂಡರು.
ವಿವಿಧ ಸಮಿತಿ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದ್ದು, ವೇದಿಕೆ ಸಮಿತಿಗೆ ವಿನಾಯಕ ಹೆಗಡೆ, ಮೆರವಣಿಗೆ ಸಮಿತಿಗೆ ಜಗದೀಶ ಹೊಸ್ಕೇರಿ, ಜಿ.ಆರ್.ತಾಂಡೇಲ್, ಊಟೋಪಚಾರ ಸಮಿತಿಗೆ ಜಗದೀಶನಾಯಕ ಹೊಸ್ಕೇರಿ, ಸನ್ಮಾನ ಸಮಿತಿಗೆ ಬಾಲಚಂದ್ರ ನಾಯಕ, ಆರೋಗ್ಯ ಸಮಿತಿಗೆ ಡಾ. ಅರ್ಚನಾ, ಪುಷ್ಪಾ ನಾಯ್ಕ, ಸ್ಮರಣ ಸಂಚಿಕೆಗೆ ಮಂಜುನಾಥ ಇಟಗಿ, ಪ್ರಚಾರ ಸಮಿತಿಗೆ ಅರುಣ ಶೆಟ್ಟಿ ನೇಮಕವಾಗಿದ್ದಾರೆ.ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು, ಸರ್ಕಾರಿ ಅಧಿಕಾರಿಗಳು ಕಡ್ಡಾಯ ಪಾಲ್ಗೊಳ್ಳುವಂತೆ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿದ್ದವರು ಹಲವಾರು ಸಲಹೆ ಸೂಚನೆ ನೀಡಿದರು.

ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಸಮ್ಮೆಳನ ಯಶಸ್ಸಿಗೆ ಸಹಕಾರ ಕೋರಿದರು.
ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ,ಏಳನೆ ತರಗತಿವರೆಗೆ ಕನ್ನಡದಲ್ಲಿ ಶಿಕ್ಷಣ ಆಗಬೇಕು ಎಂದರು.ಕಾರ್ಯದರ್ಶಿ ಜಗದೀಶ ನಾಯಕ ಸ್ವಾಗತಿಸಿದರು.ಕೋಶಾಧ್ಯಕ್ಷ ಡಾ. ಎಸ್.ವಿ. ವಸ್ತ್ರದ್ ನಿರ್ವಹಿಸಿದರು.ಕಾರ್ಯದರ್ಶಿ ಜಿ.ಆರ್. ತಾಂಡೇಲ್ ವಂದಿಸಿದರು.ಸಭೆಯಲ್ಲಿ ಹಿರಿಯ ಸಾಹಿತಿಗಳು, ಗಣ್ಯರು, ವಿವಿಧ ಸಂಘ ಸಂಸ್ಥೆ ಪ್ರಮುಖರು ಹಾಜರಿದ್ದರು.


