Spread the love

ಕಾರವಾರ: ಭಾರತೀಯ ಸಂಸ್ಕೃತಿ,ಪಾರಂಪರಿಕ ಆಚರಣೆ,ಹಿಂದೂ ಧರ್ಮದ ಸೊಬಗಿಗೆ ಮಾರು ಹೋಗದವರಿಲ್ಲ, ಸಾವಿರಾರು ವಿದೇಶಿಗರು ಭಾರತೀಯ ನೆಲದಲ್ಲಿ ಪೂಜೆ,ಪುನಸ್ಕಾರಗಳನ್ನು ಹಮ್ಮಿಕೊಂಡು ಧಾರ್ಮಿಕ ಮನೋಭಾವದೊಂದಿಗೆ ಜೀವಿಸುತ್ತಿದ್ದು ಅದಕ್ಕೆ ಪೂರವಕವೆಂಬಂತೆ ಭೂ ಕೈಲಾಸ ಎಂದೆನಿಸಿಕೊಳ್ಳುವ ಗೋಕರ್ಣದಲ್ಲಿ ರಷ್ಯನ್ ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ಪಾಂಡುರಂಗ ವಿಠಲನನ್ನು ಆರಾಧಿಸುತ್ತ ವಾಸಿಸುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು…ಭೂ ಕೈಲಾಸ,ದಕ್ಷಿಣದ ಕಾಶಿ,ಶಿವನ ಆತ್ಮಲಿಂಗವನ್ನೇ ದರೆಗಿಳಿಸಿಕೊಂಡ ಪುಣ್ಯಭೂಮಿ ಎಂದೆಲ್ಲ ಕರೆಯಿಸಿಕೊಳ್ಳುವ ಗೋಕರ್ಣ ಹಿಂದೂಗಳ ಪವಿತ್ರ ಭೂಮಿಯೂ ಹೌದು..ಶಿವನನ್ನು ಒಲಿಸಿಕೊಂಡು ಆತ್ಮಲಿಂಗವನ್ನು ಪಡೆದು ಲಂಕೆಗೆ ಹಿಂದಿರುಗುತ್ತಿದ್ದ ರಾವಣನನ್ನು ತಡೆದು ಅತ್ಮಲಿಂಗವನ್ನು ಇಲ್ಲಿಯೇ ಸ್ಥಾಪನೆಯಾಗುವಂತೆ ಮಾಡಿದ ಬಾಲ ಗಣಪನ ಹಾಗೂ ತಾಯಿ ಪಾರ್ವತಿಯ ಕತೆಯನ್ನು ಸವಿಸ್ತಾರವಾಗಿ ತಿಳಿಹೇಳುವ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಗೋಕರ್ಣವೆಂದರೆ ಶಿವ ಭಕ್ತರ ನೆಚ್ಚಿನ ತಾಣ ಹಾಗೆಯೇ ಸುಂದರ,ಮನೋಹರವಾದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಕಡಲತೀರಗಳು ಇವೆ. ಇದೆಲ್ಲವನ್ನು ಕಣ್ತುಂಬಿಕೊಳ್ಳಲು ಬರುವ ವಿದೇಶಿಗರು ಇಲ್ಲಿಯ ಆಚರಣೆಗೆ ಮಾರು ಹೋಗಿ ಇಲ್ಲಿಯೇ ವಾಸ್ತವ್ಯಹೂಡಿದ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ.

ಆಧ್ಯಾತ್ಮಿಕ ಒಲವಿನಿಂದ ಗೋಕರ್ಣದ ರಾಮತೀರ್ಥದ ಗುಡ್ಡದ ಮೇಲಿರುವ ದಟ್ಟವಾದ ಕಾನನದ ಮದ್ಯೆಯ ಗುಹೆಯಲ್ಲಿ ಕಳೆದ ಕೆಲ ದಿನಗಳಿಂದ ವಾಸವಿದ್ದ ರಷ್ಯಾ ವಿದೇಶಿ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಕಂಡ  ಪೊಲೀಸರು ರಕ್ಷಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ.


ಗೋಕರ್ಣ ಹೊರವಲಯಗಳಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಗಸ್ತು ತಿರುಗುತ್ತದೆ,ಈ ಸಂದರ್ಭದಲ್ಲಿ ಗುಡ್ಡದ ಮೇಲೆ ಯಾರೋ ಅಪರಿಚಿತರು ವಾಸವಿದ್ದಂತೆ ಕಂಡುಬಂದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ನೇತೃತ್ವದ ತಂಡ ವಿದೇಶಿ ಮಹಿಳೆಯೊರ್ವಳು ತನ್ನಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ಬಗ್ಗೆ ತಿಳಿದು ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ.

ಗುಹೆಯಲ್ಲಿ ಪರಿಶೀಲಿಸಿದಾಗ ಆಕೆಯ ಬಗ್ಗೆ ಯಾವ ಕುರುಹುಗಳು ದೊರೆತಿರಲಿಲ್ಲ,ಯಾವ ಕಾರಣಕ್ಕೂ ಗುಹೆಯಿಂದ ಹೊರಬರುವುದಿಲ್ಲ ಎಂದು ವಿದೇಶಿ ಮಹಿಳೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ ಸತತ ಒಂದೂವರೆ ಗಂಟೆಗಳ ಕಾಲ ಮನವೊಲಿಸಿ ಮಹಿಳೆ ಮತ್ತು ಮಕ್ಕಳನ್ನು ಪಟ್ಟಣಕ್ಕೆ ಕರೆತರುವ ಪ್ರಯತ್ನಕ್ಕೆ ಮುಂದಾಗಿದ್ದ ಪೊಲೀಸರಿಗೆ ಕೊನೆಗೂ ಯಶಸ್ಸು ದೊರೆಯಿತು.

ಪಾಸ್ಪೋರ್ಟ್&ವೀಸಾವನ್ನು ಅರಣ್ಯದಲ್ಲಿ ಎಸೆದಿದ್ದ  ರಷ್ಯನ್ ಲೇಡಿ!

ವಿದೇಶಿ ಮಹಿಳೆಯ ಬಗ್ಗೆ ಯಾವ ಸುಳಿವು ಇಲ್ಲದೆ ಕಂಗಾಲಾಗಿದ್ದ ಗೋಕರ್ಣ ಪೊಲೀಸರು ಆಕೆಯ ಹಿನ್ನೆಲೆಯನ್ನು ತಿಳಿಯಲು ಪಾಸ್ಪೋರ್ಟ್ ಹಾಗೂ ವೀಸಾ ಬಗ್ಗೆ ವಿಚಾರಿಸಿದಾಗ ಅರಣ್ಯ ಪ್ರದೇಶದಲ್ಲಿ ಕಳೆದುಹೋಗಿದೆ ಎಂದು ಬಾಯ್ಬಿಟ್ಟಿದ್ದಳು, ಸತತ ಒಂದು ದಿನಗಳ ನಿರಂತರ ಕೂಂಬಿಂಗ್ ಕಾರ್ಯಾಚರಣೆಯ ಮೂಲಕ ಅರಣ್ಯ ಪ್ರದೇಶದಲ್ಲಿ ಪಾಸ್ಪೋರ್ಟ್ ಹಾಗೂ ವೀಸಾವನ್ನು ಹುಡುಕಿ ತಂದ ಪೊಲೀಸರಿಗೆ ಮಹಿಳೆಯ ರಷ್ಯಾ ಮೂಲದ ನಿನಾ ಕುಟಿನಾ ( 40 ವರ್ಷ) ಎಂದು ತಿಳಿದು ಬಂದಿದೆ. ಹಾಗೆಯೇ ಆಕೆಯ ಇಬ್ಬರೂ ಮಕ್ಕಳಾದ ಕುಮಾರಿ ಪ್ರೆಮಾ( 6) ಹಾಗೂ ಕುಮಾರಿ ಅಮಾ (4 ) ಎಂದು ತಿಳಿದುಬಂದಿದೆ.

ಗೋಕರ್ಣವೇ ರಷ್ಯನ್ ಮಹಿಳೆಯ ಅಧ್ಯಾತ್ಮಿಕ ಕೇಂದ್ರ!

ಈ ಬಗ್ಗೆ ವಿದೇಶಿ ಮಹಿಳೆಯನ್ನು ವಿಚಾರಿಸಿದಾಗ  ದೇವರ ಪೂಜೆ, ಧ್ಯಾನದಿಂದ ಪ್ರೇರೇಪಿತರಾಗಿದ್ದೆ, ಆದ್ದರಿಂದ ಗೋವಾದಿಂದ ಮಕ್ಕಳೊಂದಿಗೆ ಗೋಕರ್ಣಕ್ಕೆ ಬಂದು ಗುಡ್ಡದ ಮೇಲಿರುವ ಗುಹೆಯಲ್ಲಿ ಉಳಿದುಕೊಂಡು ಧ್ಯಾನ ಹಾಗೂ ದೇವರ ಪೂಜೆ ಮಾಡಿಕೊಂಡಿದ್ದೆ ಎಂದು ಹೇಳಿದ್ದಾಳೆ.ಭಾರದಲ್ಲಿಯೇ ನೆಲೆಸುವ ಉದ್ದೇಶದಿಂದ ತನ್ನ ಹಾಗೂ ಮಕ್ಕಳ ಪಾಸ್ಪೋರ್ಟ್,ವಿಸಾಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿರಲಿಲ್ಲದ ರಷ್ಯಾದ ಮಹಿಳೆಯನ್ನು ಗುಹೆ ಇರುವ ರಾಮತೀರ್ಥ ಗುಡ್ಡವು ಕುಸಿತದ ಆತಂಕದಲ್ಲಿದ್ದು, ಅಪಾಯಕಾರಿ ವಿಷ ಜಂತುಗಳನ್ನು ಹೊಂದಿರುವ ಸ್ಥಳ ಈ ಕಾರಣ ದಿಂದ, ಅಲ್ಲಿನ ವಾಸದ ಅಪಾಯಗಳ ಬಗ್ಗೆ ವಿದೇಶಿ ಮಹಿಳೆಗೆ ತಿಳಿಸಿ, ಮಕ್ಕಳೊಂದಿಗೆ ಕೂಡಲೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪೊಲೀಸರು ಮನವರಿಕೆ ಮಾಡಿ  ಎನ್ ಜಿ ಓ ಶಂಕರ ಪ್ರಸಾದ ಪೌಂಡೇಶನ್ ನ್ನಿನ ಸರಸ್ವತಿ ಸ್ವಾಮೀಜಿ ಆಶ್ರಮಕ್ಕೆ ಕರೆತರಲಾಗಿದ್ದು,ನಂತರದಲ್ಲಿ  ರನ್ನ ಸರಸ್ವತಿ ಸ್ವಾಮೀಜಿ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು,ಮಹಿಳಾ ಪೊಲೀಸ್ ಅಧಿಕಾರಿಗಳ ಮೂಲಕ ಆಪ್ತ ಸಮಾಲೋಚನೆಗೆ ನಡೆಸಿದ್ದು ಹಲವು ಮಾಹಿತಿಯನ್ನು ಕಲೆಹಾಕಲಾಗಿದೆ ಸದ್ಯ ರಷ್ಯಾದ ನೀನಾ ಹಾಗೂ ಆಕೆಯ ಇಬ್ಬರು ಚಿಕ್ಕ ಹೆಣ್ಣು ಮಕ್ಕಳನ್ನು ಸುರಕ್ಷತೆ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಾಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಇಡಲಾಗಿದೆ.

ರಷ್ಯಾ ಎಂಬಸ್ಸಿಗೆ ಮಾಹಿತಿ! ಕೆಲ ದಿನಗಳಲ್ಲೇ ಸ್ವದೇಶಕ್ಕೆ ವಾಪಸ್ಸು!

ಪಾಸ್ಪೋರ್ಟ್ ಹಾಗೂ ವೀಸಾ ದೊರೆಯುತ್ತಿದ್ದಂತೆ ಮಹಿಳೆಯ ಹಿನ್ನೆಲೆಪತ್ತೆಯಾಗಿದ್ದು, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಮಹಿಳೆಯ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದು, ಈ ಭಾರತೀಯ ವಿದೇಶಾಂಗ ಇಲಾಖೆ ರಷ್ಯಾ ರಾಯಬಾರ ಕಚೇರಿಗೆ ಮಾಹಿತಿ ನೀಡಿದ್ದು, ಕೆಲ ದಿನಗಳಲ್ಲಿಯೇ ಮಹಿಳೆಯನ್ನು ಸ್ವದೇಶಕ್ಕೆ ವಾಪಸ್ಸು ಕಳುಹಿಸಲಾಗುವುದು ಎನ್ನಲಾಗಿದೆ.

ರಷ್ಯಾ ಮೂಲದ ನಿನಾ ಕುಟಿನಾ ಎಂಬಾಕೆ 2016 ಏಪ್ರಿಲ್ ತಿಂಗಳಿನಲ್ಲಿ ಬ್ಯುಸಿನೆಸ್ ವೀಸಾದ ಮೇರೆಗೆ ರಷ್ಯದಿಂದ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ. 2017 ಏಪ್ರಿಲ್ ನಲ್ಲಿ ವೀಸಾ ಕೊನೆಗೊಂಡ ಬಳಿಕ  2018 ರಲ್ಲಿ ಎಕ್ಸಿಟ್ ಪರ್ಮಿಟ್ ಆದೇಶವನ್ನು ಪಡೆದು ಭಾರತದಿಂದ ನೇಪಾಳ ತೆರಳುತ್ತಾಳೆ, ನಂತರ ರಸ್ತೆಮಾರ್ಗದ ಮೂಲಕ ಭಾರತವನ್ನು ಅಕ್ರಮ ಪ್ರವೇಶಿಸಿ ಗೋವಾಕ್ಕೆ ಬಂದಿದ್ದಾಳೆ ಎನ್ನಲಾಗಿದೆ. ಗೋವಾದಲ್ಲಿ ಓರ್ವ ವಿದೇಶಿ ಪುರುಷನ ಮೇಲೆ ಆಕರ್ಷಣೆಗೆ ಒಳಪಟ್ಟು ಕೆಲಕಾಲ ಗೋವಾದಲ್ಲೇ ತಂಗುತ್ತಾರೆ ಎನ್ನಲಾಗಿದೆ,ನಂತರದಲ್ಲಿ ತಮ್ಮಿಬ್ಬರು ಮಕ್ಕಳೊಂದಿಗೆ ಗೋಕರ್ಣದ ರಾಮತೀರ್ಥದ ಸಮೀಪ ದಟ್ಟಡವಿಯ ಗುಹೆಯಲ್ಲಿ ವಾಸಿಸುತ್ತಿದ್ದ ನಿನಾ ಈಗ ಭಾರತದ ಕಾನೂನಿನಂತೆ ಮರಳಿ ಸ್ವದೇಶಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಹಿಂದೂ ದೇವತೆಗಳ ಫೋಟೋ ಸಂಗ್ರಹ!

ಹಿಂದುದೇವತೆಗಳ ಫೋಟೋಗಳನ್ನು ಹುಡುಕಿತಂದು ಪೂಜಿಸುತ್ತಿದ್ದ ರಷ್ಯಾ ಮೂಲದ ನಿನಾ ಕುಟಿನಾ ಹಿಂದುಗಳ ಆರಾಧ್ಯ ದೈವವಾದ ಪಾಂಡುರಂಗ ವಿಠ್ಠಲನನ್ನು ಆರಾಧಿಸುತ್ತಿರುವ ವಿದೇಶಿ ಮಹಿಳೆ ಆಧುನಿಕ ಸಕ್ಕೂಬಾಯಿ ಎನಿಸಿಕೊಂಡಿದ್ದಾಳೆ.ಅದರಂತೆಯೇ ಗೋಕರ್ಣದ ಸುತ್ತ ಮುತ್ತಲಿನಲ್ಲಿ  ಪ್ರದೇಶದಲ್ಲಿ ದೇವರ ಫೋಟೋಗಳನ್ನು ಆರಿಸಿ ತಂದು ಪೂಜಿಸುತ್ತಿರುವುದು ಮಾತ್ರ ಈ ವಿದೇಶಿ ಮಹಿಳೆಗೆ ಆಧ್ಯಾತ್ಮಿಕ ಪ್ರೀತಿ ಎಷ್ಟರಮಟ್ಟಿಗೆ ಬೇರೂರಿತ್ತು ಎನ್ನುವುದು ಮಾತ್ರ ಜಗಜ್ಜಾಹೀರಾಗಿದೆ.

ಪ್ರಕೃತಿ ಎಂದರೆ ನಮ್ಮ ತಾಯಿ! ಸಕಲ ಜೀವ ಜಂತುಗಳು ನನ್ನ ಅಣ್ಣ ತಮ್ಮಂದಿರು!

ನಿಸರ್ಗ ನಮ್ಮ ತಾಯಿ,ತಂದೆ ನಾನು ನಿಸರ್ಗದ ಮಡಿಲಿನಲ್ಲಿ ಬದುಕಬೇಕು,ನನ್ನ ಮಕ್ಕಳು ಸಹ ದೇವರ ಪ್ರಸಾದಕ್ಕಿಟ್ಟ ಆಹಾರವನ್ನು ಅಷ್ಟೇ ಸೇವಿಸುತ್ತಾರೆ. ದೇವರ ಆರಾಧನೆ,ಧ್ಯಾನವಷ್ಟೇ ನಮ್ಮ ಜೀವ, ಸಕಲ ಜೀವ ಜಂತುಗಳು ನಮ್ಮ ಅಣ್ಣ ತಮ್ಮಂದಿರು,ನಾವು ಅವುಗಳೊಂದಿಗೆ ಬದುಕಲು ಇಚ್ಛಿಸುತ್ತೇವೆ.ನನ್ನನ್ನು ನೀವು ನಿಸರ್ಗದ ಮನೆಯಿಂದ ನನ್ನನ್ನು ಕಾಂಕ್ರೀಟ್ ಮನೆಗೆ ಕರೆದುಕೊಂಡು ಬಂದಿದ್ದೀರಿ ಎಂದು ರಷ್ಯ ಮೂಲದ ನಿನಾ ಪೊಲೀಸರೊಂದಿಗೆ ಬೇಸರವ್ಯಕ್ತಪಡಿಸಿದ್ದಳಂತೆ.

Leave a Reply

Your email address will not be published. Required fields are marked *