Spread the love

ಕಾರವಾರ: ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ ಕಾರವಾರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕೊಡಮಾಡುವ ಟ್ಯಾಗೋರ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಬಾರಿ ಸಹ ಮೂವರು ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಘದ  ಅಧ್ಯಕ್ಷ ಟಿ ಬಿ ಹರಿಕಂತ ತಿಳಿಸಿದ್ದಾರೆ.

ವಿದ್ಯುನ್ಮಾನ ಮಾದ್ಯಮ ವಿಭಾಗದಿಂದ ಸುವರ್ಣ ವಾಹಿನಿ ಜಿಲ್ಲಾ ವರದಿಗಾರ ಭರತ್ ರಾಜ್ ಕಲ್ಲಡ್ಕ, ಮುದ್ರಣ ಮಾದ್ಯಮ ವಿಭಾಗದಿಂದ ನುಡಿಜೇನು ಪತ್ರಿಕೆಗೆ ಉಪಸಂಪಾದಕ ಎಸ್.ಎಸ್ ಸಂದೀಪ್ ಸಾಗರ್, ಹಾಗೂ ಪ್ರಜಾವಾಣಿ ಛಾಯಾಗ್ರಾಹಕ ದಿಲೀಪ್ ರೇವಣಕರ್ ಗೆ ಈ ಬಾರಿ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದೆ.

ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿ ವತಿಯಿಂದ ಕಾರವಾರದಲ್ಲಿ ಆಗಸ್ಟ್ 17ರಂದು ಪತ್ರಿಕಾ ದಿನಾಚರಣೆಯನ್ನ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನ ವಿತರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ತಿಳಿಸಿದ್ದಾರೆ.

ಭರತ್ ರಾಜ್ ಕಲ್ಲಡ್ಕ ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಗ್ರಾಮದವರಾಗಿದ್ದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷ ಅನುಭವನ್ನ ಹೊಂದಿದ್ದಾರೆ. 2014ರಲ್ಲಿ ಪ್ರಜಾವಾಣಿ ವರದಿಗಾರನಾಗಿ, ನಂತರ ಏತಡೂವರೆ ವರ್ಷಗಳ ಕಾಲ ಉದಯವಾಣಿ ದಿನಪತ್ರಿಕೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾವರದಿಗಾರನಾಗಿ,2015ರಿಂದ 2017ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ನ್ಯೂಸ್ 18 ವರದಿಗಾರನಾಗಿ, 2017 ರಿಂದ 2019ರ ವರೆಗೆ ನ್ಯೂಸ್ 18 ಮಂಗಳೂರು ಬ್ಯೂರೋ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 2019ರಿಂದ ಇಲ್ಲಿಯ ವರೆಗೆ ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರನಾಗಿ ಅನೇಕ ಜನಪರ ಸುದ್ದಿಗಳನ್ನ ಪ್ರಕಟಿಸಿ ಗಮನ ಸೆಳೆದ ಪತ್ರಕರ್ತನಾಗಿದ್ದಾರೆ.

ಇನ್ನು ಎಸ್ ಎಸ್ ಸಂದೀಪ್ ಸಾಗರ್ ಮೂಲತ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದವನಾಗಿದ್ದು 2015ರಲ್ಲಿ ಪ್ರಜಾ ಟಿವಿಯ ಉತ್ತರ ಕನ್ನಡ ಜಿಲ್ಲಾ ವರದಿಗಾರನಾಗಿ ವೃತ್ತಿ ಪ್ರಾರಂಭಿಸಿದ್ದು 2022ರ ವರೆಗೆ ಪ್ರಜಾ ಟಿವಿಯಲ್ಲಿ, 2022ರಿಂದ 2024 ರವರೆಗೆ ವಿಸ್ತಾರ ಟಿವಿ ಜಿಲ್ಲಾ ವರದಿಗಾರನಾಗಿ ಕಳೆದ ಒಂದು ವರ್ಷದಿಂದ ನುಡಿಜೇನು ದಿನಪತ್ರಿಕೆಯ ಉಪ ಸಂಪಾದಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷಗಳ ಸೇವಾನುಭವವಿದ್ದು ಸರ್ಕಾರದ ಕಣ್ಣು ತೆರೆಸುವಂತಹ ಅನೇಕ ವರದಿಗಳನ್ನ ಮಾಡುವ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದ ಪತ್ರಕರ್ತರಾಗಿದ್ದಾರೆ.

ಇನ್ನು ಛಾಯಾಗ್ರಾಹಕ ದಿಲೀಪ್ ರೇವಣಕರ್ ಸಹ ಕಳೆದ 11 ವರ್ಷದಿಂದ ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹನಾಗಿ ಸೇವೆ ಸಲ್ಲಿಸಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನ ನೀಡಿದ್ದು ಈ ಹಿನ್ನಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿ ಶೇಷಗಿರಿ ಮುಂಡಳ್ಳಿ, ಪತ್ರಕರ್ತರಾದ ವಸಂತ್ ಕತಗಾಲ್, ನವೀನ್ ಸಾಗರ್, ಸಂದೀಪ್ ಸಾಗರ್ ಎಂ.ವಿ, ರಾಜೇಶ್ ವೈದ್ಯ, ಕಿಶನ್ ಗುರವ್, ಗಣೇಶ್ ಹೆಗಡೆ, ಪ್ರವೀಣ್ ಹೊಸಂತೆ, ಅವಿನಾಶ್ ಆಗೇರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *