ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ ಬಹುಮತ ಪಡೆಯುವುದರ ಮೂಲಕ ಸಂಘವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದೆ.

ಹೌದು…ಶನಿವಾರ ತಾಲೂಕ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 13 ಸ್ಥಾನಕ್ಕೆ ಸೊಸೈಟಿಗಳಿಂದ ಆಯ್ಕೆಯಾಗುವ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ 7 ಸ್ಥಾನದಲ್ಲಿ ಗೆಲುವನ್ನ ಸಾಧಿಸುವ ಮೂಲಕ ಮೆಲುಗೈ ಸಾಧಿಸಿದ್ದಾರೆ.

ಇನ್ನು ಗೋಪಾಲಕೃಷ್ಣ ನಾಯಕ ವಿರೋಧಿ ಬಣ 5 ಸ್ಥಾನದಲ್ಲಿ ಗೆಲುವನ್ನ ಪಡೆದಿದ್ದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿರುವುದರಿಂದ ಚುನಾವಣೆಯ ಫಲಿತಾಂಶವನ್ನ ಇನ್ನೂ ಪ್ರಕಟವಾಗದೆ ಹಾಗೆಯೇ ಉಳಿದುಕೊಂಡಿದೆ ಎನ್ನಲಾಗಿದೆ.
ಗೋಪಾಲಕೃಷ್ಣ ನಾಯಕ ಬಣದಲ್ಲಿ ಗುರುತಿಸಿಕೊಂಡಿರುವ ಭೀರಣ್ಣ ಬೊಮ್ಮಯ್ಯ ನಾಯಕ, ಪ್ರೀತಮ್ ಗೋಪಾಲ ನಾಯಕ, ವೆಂಕಟರಾಯ ಆರ್ ನಾಯಕ, ನರಸಿಂಹ ಭಾಗ್ವತ್, ದೇವಾನಂದ ವಿಠಲ ನಾಯಕ, ಹಾಗೂ ಗೋಪಾಲ ಪ್ರದೀಪ್ ನಾಯಕ ಗೆಲುವು ಸಾಧಿಸಿದ್ದು ಬಹುಮತದೊಂದಿಗೆ ಮೆಲುಗೈ ಸಾಧಿಸಿದಂತಾಗಿದೆ.
ಎರಡು ಪ್ರಬಲ ಬಣಗಳ ತಿಕ್ಕಾಟದಲ್ಲಿ ಅಂಕೋಲಾ ಟಿ ಎಂ ಎಸ್ ಯಾರ ಪರ?
ಕುತೂಹಲ ಮೂಡಿಸಿದ ಕೆಡಿಸಿಸಿ ಚುನಾವಣೆ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಸಚಿವ ಮಂಕಾಳು ವೈದ್ಯ ಪ್ರತಿಷ್ಠೆಗೆ ತೆಗೆದುಕೊಂಡಿದ್ದು,ಮಾರ್ಕೆಂಟಿಂಗ್ ಸೊಸೈಟಿಗಳಿಂದ ಆಯ್ಕೆಯಾಗುವ ಕೆಡಿಸಿಸಿ ಚುನಾವಣೆಯಲ್ಲಿ ಅಂಕೋಲಾ ಟಿ.ಎಂ.ಎಸ್ ಯಾರ ಪರ ಒಲವು ಮಾಡಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಶಾಸಕ-ಸಚಿವರ ಎರಡು ಬಣಗಳು ಸಮಬಲ ಸಾಧಿಸಿದ್ದು ಅಂಕೋಲಾ ಟಿ.ಎಂ.ಎಸ್ ಮತ ನಿರ್ಣಾಯಕ ಪಾತ್ರವಹಿಸುತ್ತಿರುವುದರಿಂದ ಎಲ್ಲರ ಚಿತ್ತ ಅಂಕೋಲಾ ಟಿ.ಎಂ.ಎಸ್ ನತ್ತ ಮುಖ ಮಾಡಿದೆ.


