ಅಂಕೋಲಾ : ತಮ್ಮ ಸ್ವಂತ ಖರ್ಚಿನಿಂದಲೇ ನೂತನವಾಗಿ ನಿರ್ಮಿಸಿರುವ ಶ್ರೀ ಕೃಷ್ಣ ಸಭಾಭವನವನ್ನು ಸೋಮವಾರ ಮಾಜಿ ಶಾಸಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಸಂತೋಷ ನಾಯ್ಕ ತಮ್ಮ ಅಮೃತಹಸ್ತದಿಂದಲೇ ಲೋಕಾರ್ಪಣೆಗೊಳಿಸಿದರು.

ಹೌದು..ತೆಂಕಣಕೇರಿಯ ಶ್ರೀ ಕೃಷ್ಣ ಮಿತ್ರ ಮಂಡಳಿಗೆ ನೂತನವಾಗಿ ನಿರ್ಮಾಣಗೊಂಡ ಸಭಾಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಶಾಸಕರ ನಿಧಿಯಿಂದ ಈ ಭವನ ನಿರ್ಮಿಸಿಕೊಡಲು ಯೋಚಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣದಿಂದ ತಡೆ ಬಂದಿತ್ತು. ನಂತರ ಸರ್ಕಾರ ಬದಲಾದ ಕಾರಣ ಕೊಟ್ಟ ಮಾತು ತಪ್ಪಬಾರದು ಎಂಬ ಕಾರಣಕ್ಕಾಗಿ ನಾನೇ ನಿರ್ಮಿಸಿಕೊಟ್ಟಿದ್ದೇನೆ. ಈ ಭವನ ನಿರಂತರ ಚಟುವಟಿಕೆಯ ಕೇಂದ್ರವಾಗಲಿ. ಯುವಕರು, ಮಹಿಳೆಯರು ವಿಧಾಯಕ ಚಟುವಟಿಕೆಗೆ ಇದನ್ನು ಬಳಸಿಕೊಳ್ಳಬೇಕು ಎಂದರು.

ಪತ್ರಕರ್ತ ವಿಠ್ಠಲದಾಸ ಕಾಮತ್ ಮಾತನಾಡಿ, ಸರ್ಕಾರದ ಅನುದಾನದಲ್ಲಿ ನಿರ್ಮಿಸಬೇಕಿದ್ದ ಈ ಸಭಾಭವನವನ್ನು ಸ್ವತ: ರೂಪಾಲಿ ನಾಯ್ಕ ಅವರೇ ಸುಂದರವಾಗಿ ಕಟ್ಟಿಕೊಟ್ಟು ಊರವರ ಮನಗೆದ್ದಿದ್ದಾರೆ. ಮಾಜಿ ಶಾಸಕರಾದರೂ ಸತತವಾಗಿ ಸಾರ್ವಜನಿಕರು, ಕಾರ್ಯಕರ್ತರೊಂದಿಗೆ ಸಂಪರ್ಕ ಇರಿಸಿಕೊಂಡು ಜನರ ನೋವು ದುಮ್ಮಾನಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಬೊಮ್ಮಯ್ಯ ಮಾಸ್ತರ್, ಬಿಜೆಪಿ ಮಂಡಳಾದ್ಯಕ್ಷ ಸಂಜಯ ನಾಯ್ಕ ಭಾವಿಕೇರಿ,ಪುರಸಭೆ ಅಧ್ಯಕ್ಷ ಸೂರಜ ನಾಯ್ಕ, ಸದಸ್ಯೆ ಜಯಾ ನಾಯ್ಕ,ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಮಾಜಿ ಅಧ್ಯಕ್ಷೆ ಸೀಮಾ ಸುಧೀರ ನಾಯ್ಕ, ಸದಸ್ಯರುಗಳಾದ ಜಯಂತ ನಾಯ್ಕ, ರೇಖಾ ಆಗೇರ್, ಉಪನಾಡವರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪಕುಮಾರ ನಾಯ್ಕ, ಕಾರ್ಯದರ್ಶಿ ಜಯಂತ ಎನ್.ನಾಯ್ಕ, ನಿವೃತ್ತ ಪಿಡಿಒ ಗಣಪತಿ ಬಿ.ನಾಯ್ಕ, ಪ್ರಮುಖರಾದ ದಾಮೋದರ ರಾಯ್ಕರ, ಶಿವಾ ರಾಯ್ಕರ ಮತ್ತಿತರರು ಇದ್ದರು.

ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಮಂಜುನಾಥ ನಾರಾಯಣ ನಾಯ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಗೌರೀಶ ವಿಠ್ಠಲ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ ಗಣಪತಿ ನಾಯ್ಕ ವಂದಿಸಿದರು.


