ಬೆಳಗಾವಿ/ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಕೇಣಿಯಲ್ಲಿ ನಿರ್ಮಿಸಲಾಗುತ್ತದೆ ಎನ್ನಲಾಗುವ ವಾಣಿಜ್ಯ ಬಂದರು ವಿರೋಧ ಹೋರಾಟ ಸಮಿತಿ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜನ ವಿರೋಧಿ,ಕ್ಯಾನ್ಸರ್ ಕಾರಕ ವಾಣಿಜ್ಯ ಬಂದರನ್ನು ನಿರ್ಮಿಸಿದಂತೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಹೌದು… ಅಂಕೋಲಾ ತಾಲೂಕಿನ ಕೇಣಿಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಬಂದರು ಯೋಜನೆಯಿಂದ ಸ್ಥಳೀಯ ಜನಜೀವನಕ್ಕೆ ಮತ್ತು ಮೀನುಗಾರಿಕೆಗೆ ತೀವ್ರ ತೊಂದರೆ ಎದುರಾಗುವುದರಿಂದ ಈ ಬಂದರು ಕಾಮಗಾರಿಗೆ ಕರಾವಳಿಯಾದ್ಯಂತ ಬಾರಿ ವಿರೋಧ ಏರ್ಪಟ್ಟಿತ್ತು ಈ ಕುರಿತು ನಿರಂತರ ಹೋರಾಟವು ನಡೆಯುತ್ತಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ವಾಣಿಜ್ಯ ಬಂದರು ಹೋರಾಟ ಸಮಿತಿ ಸ್ಥಳೀಯ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಭೇಟಿಯಾಗಿ ವಾಸ್ತವತೆಯನ್ನು ತಿಳಿಸಿ ಮನವಿ ಸಲ್ಲಿಸಿದರು.

ವಾಣಿಜ್ಯ ಬಂದರು ವಿರೋಧಿಸಿ ನಡೆದಿದ್ದ ಕರಾಳ ದಿನ ಹಾಗೂ ಅಂಕೋಲಾ ಬಂದ್ ನಲ್ಲಿ ಹೋರಾಟಗಾರರಿಗೆ ಮಾತು ಕೊಟ್ಟಿದ್ದ ಗೋಪಾಲಕೃಷ್ಣ ನಾಯಕ!
ಕೇಣಿಯಲ್ಲಿ ನಿರ್ಮಾಣವಾಗುತ್ತದೆ ಎನ್ನಲಾಗುವ ಉದ್ದೇಶಿತ ಕೇಣಿ ವಾಣಿಜ್ಯ ಬಂದರನ್ನು ವಿರೋಧಿಸಲು ನವೆಂಬರ್ 25 ರಂದು ಹಮ್ಮಿಕೊಳ್ಳಲಾಗಿದ್ದ ಕರಾಳ ದಿನ ಆಚರಣೆಗೆ ಹಾಗೂ ಅಂಕೋಲಾ ಬಂದ್ ನಲ್ಲಿ ಹೋರಾಟಗಾರರ ನೋವನ್ನು ಮನಗಂಡು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರ ಮುಂದೆಯೇ ತಮ್ಮ ನೋವನ್ನು ತೋಡಿಕೊಳ್ಳಲು ನಾವು ಸ್ವತಃ ಅಲ್ಲಿಯೇ ತೆರಳುವ ಸಂದರ್ಭ ಎದುರಾದರೂ ಹೋರಾಟಗಾರರೊಂದಿಗೆ ನಾನು ಇದ್ದೇನೆ ಎನ್ನುವ ಭರವಸೆ ನೀಡುತ್ತೇನೆ ಎಂದಿದ್ದರು ಅಂದು ಆಡಿದ ಮಾತಿನಂತೆ ಇಂದು ಕೇಣಿ ಬಂದರು ವಿರೋಧಿ ಸಮಿತಿಯವರಿಗೆ ಸಾಥ್ ನೀಡಿದ ಗೋಪಾಲಕೃಷ್ಣ ನಾಯಕ ವಾಣಿಜ್ಯ ಬಂದರನ್ನು ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಮೋದ ಬಾನಾವಳಿಕರ್, ಸಂಜೀವ ಬಲೆಗಾರ್,ವೆಂಕಟೇಶ್ ದುರ್ಗೆಕರ್,ಮಂಜುನಾಥ್ ಟಾಕೀಕರ್,ಕೇಶವ ನಾಯ್ಕ,ಕೃಷ್ಣಮೂರ್ತಿ ನಾಯಕ,ಗೋವಿಂದ ಗೌಡ,ತೋಕು ಕೋಡಾರ್ಕರ್,ಜೈರಾಮ್ ಬಾನಾವಳಿಕರ್,ಸಂತೋಷ ಹನ್ಮಟಕರ್,ವಿಳಾಸ ನಾಯಕ,ಮೋಹನ್ ದುರ್ಗೆಕರ್,ಸೂರಜ್ ಹರಿಕಂತ್ರ,ಪ್ರಶಾಂತ ದುರ್ಗೆಕರ್,ಸರಿತಾ ಬಲೆಗಾರ,ಶೋಭಾ ಗೌಡ,ಜಾನಕಿ ಗೌಡ ಮತ್ತಿತರರು ಉಪಸ್ಥಿತರಿದ್ದರು.


