Spread the love

ಅಂಕೋಲಾ:ನಾವು ಹುಟ್ಟಿದಾಗಿನಿಂದ ಆಸೆಪಡುವ ಎಲ್ಲವನ್ನು ಹಂತ ಹಂತವಾಗಿ ಪಡೆಯುತ್ತೇವೆ,ನಮ್ಮೆಲ್ಲರ ಜೀವನದಲ್ಲಿ ನಾವು ಗಳಿಸಿದ ಎಲ್ಲವೂ ದೂರವಾದರು ನಮ್ಮ ಜೀವನದ ಕೊನೆಗೆ ನಮ್ಮ ಬಳಿ ಇರುವವರು ಶುಶ್ರೂಷಕಿಯರು ಮಾತ್ರ ಆದ್ದರಿಂದ ಶುಶ್ರೂಷಕಿ ವೃತ್ತಿ ಅತ್ಯಂತ ಪಾವಿತ್ರ್ಯತೆ ಹಾಗೂ ಜವಾಬ್ದಾರಿಯಿಂದ ಕೂಡಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಹೇಳಿದರು.

ಅವರು ವಿಶ್ವದರ್ಶನ ಶಿಕ್ಷಣ ಸಮೂಹ ಯಲ್ಲಾಪುರ ಹಾಗೂ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ಅಂಕೋಲಾ(ಉ.ಕ) ವತಿಯಿಂದ ನಾಡವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 27 ನೇ ಬ್ಯಾಚಿನ ಶುಶ್ರುಷಾ ವಿದ್ಯಾರ್ಥಿಗಳ ದೀಪಧಾರಣ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜವಾಬ್ದಾರಿಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಈ ಕಾರ್ಯಕ್ರಮ ಪ್ರಮುಖವಾಗಿದೆ. ನಮ್ಮ ಬದುಕನ್ನು ರೂಪಿಸಿಕೊಳ್ಳಲು ನಮ್ಮ ಪ್ರಯತ್ನ ನಿರಂತರವಾಗಿದ್ದು, ತಂದೆ ತಾಯಿಗಳು ಸಹ ಮಕ್ಕಳ ಮೇಲಿನ ಕಾಳಜಿ-ಪ್ರೀತಿಯಿಂದ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ ಅವರನ್ನು ನಾವು ಎಂದಿಗೂ ಮರೆಯಬಾರದು.

ಅಂದು ಶಾಸಕರಾಗಿದ್ದ ಉಮೇಶ ಭಟ್ಟರು ಕಂಡ ಕನಸಿನಿನ ಪ್ರತಿಫಲ ಹಾಗೂ ನೂರಾರು ಜನ ಶಿಕ್ಷಕರು ಹಾಗೂ ಸಿಬ್ಬಂದಿಗಳ ತ್ಯಾಗ,ಪರಿಶ್ರಮದಿಂದ ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಇದ್ದ ವಿದ್ಯಾರ್ಥಿಗಳು ಇಂದು ಎರಡೂವರೆ ಸಾವಿರದ ಗಡಿ ತಲುಪಿ ಇಂದು ಯೋಗ್ಯ ಶಿಕ್ಷಣ ಪಡೆಯುತಿದ್ದಾರೆ. ನಮ್ಮ ಸಂಸ್ಥೆ ಎಂದೆಂದಿಗೂ ಹಣದ ಹಿಂದೆ ಹೋಗಿದ್ದ ಇತಿಹಾಸವಿಲ್ಲ,ಬದಲಾಗಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದು  ನಮ್ಮ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯರಾದ ಡಾ.ಅನುಪಮಾ ನಾಯಕ ಪ್ರತಿಯೋರ್ವ ವಿದ್ಯಾರ್ಥಿಯ ಜೀವನದಲ್ಲಿ ಇಂದಿನ ದಿನ ಅಚ್ಚಳಿಯದೆ ಉಳಿಯಲಿದೆ. ಮುಂದಿನ ವೃತ್ತಿ ಬದುಕಿನಲ್ಲಿ ರೋಗಿಗಳೊಂದಿಗೆ ಯಾವ ರೀತಿಯಲ್ಲಿ ಅವರನ್ನು ಪ್ರೀತಿಸಿ ಆರೈಕೆಮಾಡಬೇಕು ಎನ್ನುವುದನ್ನು ಮನದಟ್ಟು ಮಾಡಿಸಿದೆ. ಮೂಡನಂಬಿಕೆಗಳನ್ನಿ ಕಳಚಿ ಜ್ಞಾನವನ್ನು ಬೆಳೆಸುವುದರೊಂದಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಹಾಗೆಯೇ ಈ ಸಂಸ್ಥೆ ಎಷ್ಟೊಂದು ಅಂಗ ಸಂಸ್ಥೆಗಳನ್ನು ಹೊಂದಿದ್ದು ಶೈಕ್ಷಣಿಕ ಹಸಿವನ್ನು ಅಪಾರ ಪ್ರಮಾಣದಲ್ಲಿ ನೀಗಿಸುತ್ತಿರುವುದನ್ನು ಕಂಡು ಸಂಸ್ಥೆಯ ಕುರಿತು ಮತ್ತಷ್ಟು ಹೆಮ್ಮೆ ಎನಿಸುತ್ತಿದೆ.ಮನುಷ್ಯ ಜನ್ಮವನ್ನು  ಸಾರ್ಥಕಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕವಾಗಿ ತಮ್ಮ ಜೀವನವನ್ನು ವ್ಯಯಿಸಿ, ದೊರೆತಿರುವ ಅವಧಿಯನ್ನು ಆದಷ್ಟು ಜನಸೇವೆಗೆ ಮುಡಿಪಾಗಿಡಿ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತಾನಾಡಿದ ಪತ್ರಕರ್ತರಾದ ಸುಭಾಷ್ ಕಾರೆಬೈಲ್ ಬದುಕಿನಲ್ಲಿ ಹುಟ್ಟು,ಸಾವು ಸಾಮಾನ್ಯ ಆದರೆ ನಮ್ಮ ಜೀವಿತಾವಧಿಯಲ್ಲಿ ಮಾಡಿದ ಕಾರ್ಯದಿಂದಲೇ ನಮ್ಮ ಮರಣದನಂತರವು ಇತರರು ನಮ್ಮನ್ನು ನೆನೆಸಲು ಸಾಧ್ಯ. ಉತ್ತಮ ಶುಶ್ರುಷಕಿಯರ ಸಾಂತ್ವಾನದ ನುಡಿಗಳಿಂದ ರೋಗಿಯ ಜೀವನದಲ್ಲಿ ಹೊಸ ಚೈತನ್ಯ ಮೂಡಲು ಸಾಧ್ಯ. ಓರ್ವ ಉತ್ತಮ ಶುಶ್ರೂಷಕಿ ರೋಗಿಯ ಬಾಳಿನಲ್ಲಿ ಹೊಸ ಹುರುಪು ತುಂಬಲು ಸಾಧ್ಯವಾಗಿದೆ, ಹಾಗೆಯೇ ನಿಮ್ಮೆಲ್ಲರಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲು ನಿಮ್ಮ ಪಾಲಕರು ಹಾಗೂ ನಿಮ್ಮನ್ನು ಉತ್ತಮವಾಗಿ ಸಿದ್ಧಗೊಳಿಸುವ ಶಿಕ್ಷಕರ ಕನಸನ್ನು ನನಸುಮಾಡುವ ನಿಟ್ಟಿನಲ್ಲಿ ನಿಮ್ಮ ಶ್ರಮವ್ಯಯಿಸಿ, ಸೇವೆ ಎನ್ನುವ ಮನೋಭಾವದಿಂದ ನೀವು ಶುಶ್ರುಷಾ ವಿಭಾಗಕ್ಕೆ ಬಂದಿದ್ದೀರಿ ನಿಮ್ಮ ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಉಜ್ವಲವಾಗಿರಲಿ ಎಂದು ಹಾರೈಸಿದರು.

ನಿವೃತ್ತ ಪ್ರಾಚಾರ್ಯರಾದ ದೀಪಾಲಿ ಕುರ್ಡೆಕರ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದೀಪಧಾರಣ ಮಾಡಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು ಇಂದು ಮಕ್ಕಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿ ಜೀವನದ ಮೈಲಿಗಲ್ಲಿನ ಮೊಟ್ಟ ಮೊದಲ ಹೆಜ್ಜೆಯಿಟ್ಟಿದ್ದಾರೆ.ಇಂದು ನನಗೆ ಸನ್ಮಾನಿಸಿ ಗೌರವಿಸಿದ ನಿಮ್ಮೆಲ್ಲರಿಗೂ ಅಭಾರಿಯಾಗಿದ್ದೇನೆ,ಈ ಸಂಸ್ಥೆಯ ಅಭಿವೃದ್ಧಿಗೆ ಮಾಜಿ ಶಾಸಕ ಉಮೇಶ್ ಭಟ್ಟರ ಕೊಡುಗೆ ಅಪಾರ ಅವರಿಂದಲೇ ನಾನು ಇಷ್ಟೊಂದು ದೊಡ್ಡ ಹುದ್ದೆಗೆ ಅನುಭವಿಸಲು ಸಾಧ್ಯವಾಗಿದೆ. ಅಂದು ಅವರ ಆಶಯಗಳನ್ನು ಹರಿಪ್ರಕಾಶ ಕೋಣೆಮನೆಯವರು ಇಂದು ಈಡೇರಿಸುತ್ತಿದ್ದಾರೆ. ಬಡ ಹೆಣ್ಣು ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಶ್ವದರ್ಶನ ನರ್ಸಿಂಗ್ ಸ್ಕೂಲ್ ಶ್ರಮಿಸುತ್ತಿದೆ.ಸ್ಥಳೀಯ ದಾನಿಗಳು ತನುಮನಧನದಿಂದ ಸಹಕರಿಸಿದ ಸಂಸ್ಥೆ ಮತ್ತಷ್ಟು ಮೈಲಿಗಳ್ಳನ್ನು ಸಾಧಿಸಲು ನೆರವಾಗುತ್ತದೆ. ಈ ನಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಲ್ಲಿಯ ಶಿಕ್ಷಕರು ಬೋಧಿಸುತ್ತಿದ್ದಾರೆ ಆದ್ದರಿಂದ ಇಂತಹ ಕಾರ್ಯಕ್ರಮ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಶುಶ್ರೂಷಾ ಶಾಲೆ,ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬೆಳಗಾವಿ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ದೀಪಾಲಿ ಕುರ್ಡೆಕರ್ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿನಿ ಅಂಕಿತಾ ಗುನಗಾ ಸಂಗಡಿಗರಿಂದ ಪ್ರಾರ್ಥನೆ,ಸ್ವಾಗತ ವಿಶ್ವದರ್ಶನ ಶಿಕ್ಷಣ ಸಮೂಹದ ಸ್ಕೂಲ್ ಆಫ್ ನರ್ಸಿಂಗ್ ಅಂಕೋಲಾದ ಪ್ರಾಚಾರ್ಯ ಶಂಕರ ಕಡೆಮನೆ ಸ್ವಾಗತಿಸಿದರು. ಐಶ್ವರ್ಯ ನಾಯ್ಕ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಬೋಧಕ ಸಿಬ್ಬಂದಿ ಅನುಷಾ ವಂದಿಸಿದರು.ಕಾರ್ಯಕ್ರಮವನ್ನು ಬೋಧಕ ಸಿಬ್ಬಂದಿ ಅಂಜಲಿ ನಾಯ್ಕ ಹಾಗೂ ಗೀತಾ ನಾಯ್ಕ ನಿರೂಪಿಸಿದರು.

Leave a Reply

Your email address will not be published. Required fields are marked *