ಕಾಣಕೋಣ:ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಯೋರ್ವ ಗೆಳೆಯರೊಂದಿಗೆ ಗೋವಾದ ಪೋಲೆಂ ಕಡಲತೀರಕ್ಕೆ ಈಜಲು ತೆರಳಿದ್ದು,ಅಲೆಗಳ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದು,ಹ್ಯಾಲಿಕ್ರಾಪ್ಟರ್ ಮೂಲಕ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಗೋವಾ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಹೌದು… ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಂಕೋಲಾ ತಾಲೂಕಿನ ಬೆಳಾಬಂದರ್ ಗ್ರಾಮದ ವಿಘ್ನೇಶ್ವರ ಪ್ರಕಾಶ ನಾಯ್ಕ(20) ಹಾಗೂ ಅಂಕೋಲಾ ಮೂಲದ ಇರ್ವರು ಗೆಳೆಯರೊಂದಿಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕರ್ನಾಟಕ ಗೋವಾ ಗಡಿ ಬಾಗವಾದ ಪೋಲೆಂ ಕಡಲತೀರಕ್ಕೆ ಈಜಲು ತೆರಳಿದ್ದರು ಎನ್ನಲಾಗಿದೆ.

ನಂತರ ಈಜಲು ಸಮುದ್ರಕ್ಕೆ ಇಳಿದಿದ್ದರು ಎನ್ನಲಾಗಿದೆ. ಇವೇಳೆಯಲ್ಲಿ ಸಮುದ್ರದ ಅಲೆಗೆ ಸಿಲುಕಿ ವಿಘ್ನೇಶ್ವರ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಮತ್ತಿರ್ವರು ಗೆಳೆಯರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕಾಶ ನಾಯ್ಕ ದಂಪತಿಗಳಿಗೆ ಒಬ್ಬನೇ ಮಗನಾಗಿದ್ದ ಈತ ಮನೆಯಲ್ಲಿ ಕಾಲೇಜಿನ ಪ್ರವಾಸಕ್ಕೆ ತೆರಳುತ್ತೇನೆ ಎಂದು ಹೇಳಿ ಹೋಗಿದ್ದ ಎನ್ನಲಾಗಿದೆ.

ವಿಘ್ನೇಶ್ವರ ನಾಯ್ಕ ಸಮುದ್ರದ ಅಲೆಗೆ ಸಿಲುಕಿ ಕಣ್ಮರೆಯಾಗುತ್ತಿದ್ದಂತೆಯೇ ಆತನ ಜೊತೆಗೆ ತೆರಳಿದ್ದ ಇರ್ವರು ಗೆಳೆಯರು ಕಾರವಾರದಲ್ಲಿರುವ ಕಾಲೇಜಿಗೆ ಬಂದು ಸುದ್ದಿ ತಿಳಿಸಿದ್ದಾರೆ ಎನ್ನಲಾಗಿದೆ. ಸರಳ ಸಜ್ಜನ್ನಿಕೆಯಿಂದ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದ ವಿಘ್ನೇಶ್ವರ ಸಮದ್ರದಲ್ಲಿ ಸಿಲುಕಿ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಬೆಳಾಬಂದರ್ ಗ್ರಾಮದಾದ್ಯಂತ ಶೋಕದ ವಾತಾವರಣ ಏರ್ಪಟ್ಟಿದೆ. ಶುಕ್ರವಾರ ಕತ್ತಲೆಯಾಗುತ್ತಿದ್ದಂತೆಯೇ ಶೋಧಕಾರ್ಯ ಅಂತ್ಯಗೊಳಿಸಿದ್ದು ನಾಳೆ ಬೆಳಿಗ್ಗೆಯಿಂದಲೇ ಪ್ರಾರಂಭಿಸಲಾಗುವುದು ಎಂದು ತಿಳಿದುಬಂದಿದೆ.
ಈ ಕುರಿತು ಕಾಣಕೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋವಾ ಪೊಲೀಸರು,ಅಗ್ನಿಶಾಮಕದಳ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ವಿದ್ಯಾರ್ಥಿಯ ಶೋಧ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.


