Spread the love

ಹೊನ್ನಾವರ: ತಾಲೂಕಿನ ಭಿಕಾಸಿತಾರಿಯಲ್ಲಿರುವ ಪ್ರಸಿದ್ಧ ಶರಾವತಿ ಬೋಟಿಂಗ್ ಸ್ಥಳದಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಪ್ರವಾಸಿಗರನ್ನು ಕರೆತಂದಿದ್ದ ಟಿ.ಟಿ ವಾಹನವೊಂದು ಹಿಮ್ಮುಖವಾಗಿ ಚಲಿಸುವಾಗ (ರಿವರ್ಸ್ ತೆಗೆದುಕೊಳ್ಳುವಾಗ) ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಶರಾವತಿ ನದಿಗೆ ಇಳಿದಿದೆ. ನದಿ ತೀರದ ಸೌಂದರ್ಯ ಸವಿಯಲು ಹಾಗೂ ಬೋಟಿಂಗ್ ಮಾಡಲು ಬಂದಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಈ ದಿಢೀರ್ ಘಟನೆಯಿಂದ ಕೆಲಕಾಲ ತೀವ್ರ ಆತಂಕಕ್ಕೊಳಗಾದರು.

ಅದೃಷ್ಟವಶಾತ್, ವಾಹನವು ನದಿಗೆ ಉರುಳಿದ ಈ ಭೀಕರ ಸಮಯದಲ್ಲಿ ಟಿ.ಟಿ ವಾಹನದಲ್ಲಿ ಹಾಗೂ ಅದರ ಸಮೀಪ ನದಿಯಲ್ಲಿದ್ದ ಬೋಟ್‌ಗಳಲ್ಲಿ ಯಾವುದೇ ಜನರಿರಲಿಲ್ಲ. ಪ್ರವಾಸಿಗರೆಲ್ಲರೂ ಮೊದಲೇ ವಾಹನದಿಂದ ಕೆಳಗಿಳಿದು ತೆರಳಿದ್ದ ಕಾರಣ ಬಹುದೊಡ್ಡ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ. ಒಂದು ವೇಳೆ ವಾಹನದಲ್ಲಿ ಅಥವಾ ವಾಹನ ಬಿದ್ದ ರಭಸಕ್ಕೆ ಸಿಲುಕುವಂತಿದ್ದ ಬೋಟ್‌ನಲ್ಲಿ ಜನರಿದ್ದಿದ್ದರೆ ಭಾರಿ ದುರಂತವೇ ಸಂಭವಿಸುತ್ತಿತ್ತು.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಅಧಿಕಾರಿಗಳು, ಕ್ರೇನ್ ಮೂಲಕ ನದಿಗೆ ಇಳಿದಿದ್ದ ಟಿ.ಟಿ ವಾಹನವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.

https://www.instagram.com/reel/DXyZTwaMrLs

Leave a Reply

Your email address will not be published. Required fields are marked *