ಅಂಕೋಲಾ: ತಾಲೂಕಿನ ಅಗ್ರಗೊಣ ಗ್ರಾಪಂ ವ್ಯಾಪ್ತಿಯ ಬೈಲಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 75 ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಏಪ್ರಿಲ್ 10 ಕ್ಕೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ನೆರವೇರಿಸಲಿದ್ದೇವೆ ಎಂದು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿ ಪಿ ನಾಯಕ ಹೇಳಿದರು.

ಪಟ್ಟಣದ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ಸೈಲ್ ವಹಿಸಲಿದ್ದಾರೆ.

ವಿಶೇಷ ಅಮಂತ್ರಿತರಾಗಿ ಉದ್ಯಮಿಗಳಾದ ಮಯೂರ್ ಆರ್ ನಾಯಕ,ರಾಘವೇಂದ್ರ ಡಿ ನಾಯಕ, ಜಿಪಂ ಮಾಜಿ ಸದಸ್ಯ ಪ್ರದೀಪ ಡಿ ನಾಯಕ, ಶಿಕ್ಷಣ ಇಲಾಖೆಯ ಪ್ರಮುಖರಾದ ಲತಾ ಎಂ ನಾಯಕ,ಮಂಗಲಲಕ್ಷ್ಮೀ ಪಾಟೀಲ್, ವಿ ಟಿ ನಾಯಕ,ಗಣೇಶ ಪಿ ನಾಯಕ, ಹಾಗೂ ಪ್ರಮುಖರಾದ ಮಂಜೇಶ್ವರ ಎಂ ನಾಯಕ,ತಿಮ್ಮಣ್ಣ ಎಂ ನಾಯಕ,ಭಾಸ್ಕರ್ ನಾರ್ವೆಕರ್, ಪ್ರಕಾಶ್ ಗೌಡ,ಮಹೇಶ ಎನ್ ಮುಡಂಗಿ,ನಾರಾಯಣ ಜಿ ಗೌಡ,ವಿಜಯ ಗೌಡ ಮುಂತಾದವರು ಆಗಮಿಸಲಿದ್ದಾರೆ ಎಂದರು.
ಶೋಷಿತ ಹಾಲಕ್ಕಿ ಸಮುದಾಯವರಿಗೆ ಶೈಕ್ಷಣಿಕ ನೆಲಗಟ್ಟನ್ನು ಸ್ಥಾಪಿಸಲು 1950 ಡಿಸೆಂಬರ್ 19 ರಂದು ಪಣತೊಟ್ಟ ಪರಮೇಶ್ವರ್ ವೆಂಕಣ್ಣ ನಾಯಕರವರು, ಅಗ್ರಗೊಣ ಗ್ರಾಪಂ ವ್ಯಾಪ್ತಿಯ ಬೈಲಕೇರಿ ಗ್ರಾಮದ ಹಮ್ಮು ರಾಮ ಗೌಡ ಮನೆಯಂಗಳದಲ್ಲಿ ಗಾಂವಟಿ ಶಾಲೆಯನ್ನು ಅಂದೆಯೇ ಅಲ್ಲಿ ಶಿಕ್ಷಣ ಕ್ರಾಂತಿಗೆ ಶಾಲೆ ಪ್ರಾರಂಭಿಸಿದರು. ಹಾಗೆಯೇ ಸ್ಥಳೀಯರಿಗೆ ಶೈಕ್ಷಣಿಕವಾಗಿ ಆಕರ್ಷಿಸಲು ತಮ್ಮ ಮಕ್ಕಳನ್ನೇ ಶಾಲೆಗೆ ಸೇರ್ಪಡೆ ಮಾಡಿದ್ದರು. 15 ಮಕ್ಕಳಿಂದ ಪ್ರಾರಂಭವಾದ ಶಾಲೆಗೆ ನಂತರ ಹೈದರಾಬಾದ್ ಕರ್ನಾಟಕದ ಸರಕಾರ ಈ ಶಾಲೆಯನ್ನು ತನ್ನ ಸುಪರ್ದಿಗೆ ಸೇರಿಸಿಕೊಂಡು ಸರಕಾರಿ ಶಾಲೆಯಾಗಿ ಮಾರ್ಪಟ್ಟು ಮಾಡಿಕೊಂಡು ಸರಕಾರದ ಸೌಲಭ್ಯಗಳನ್ನು ಪಡೆಯಲು ಪ್ರಾರಂಭಿಸಿತ್ತು, ಅಂದಿನಿಂದ ಇಂದಿನವರೆಗೆ ಸಹಸ್ರಾರು ವಿದ್ಯಾರ್ಥಿಗಳ ಶೈಕ್ಷಣಿಕ ಹಸಿವನ್ನು ತಣಿಸಿ ತಮ್ಮ ತಮ್ಮ ಜೀವನವನ್ನು ಕಟ್ಟಿಕೊಂಡಿರುವುದೇ ಈ ಶಾಲೆಯ ಸಾಧನೆಯಾಗಿದೆ. ಶಾಸಕ ಸತೀಶ್ ಸೈಲ್ ಈ ಶಾಲೆಯ ಶ್ರೇಯೋಭಿವೃದ್ಧಿಗೆ 9 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿ ಮಾದರಿ ಶಾಲೆಯಾಗಿ ಮಾಡಲು ಪಣತೊಟ್ಟಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.

ನಾವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತಮಹೋತ್ಸವವನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಒಟ್ಟಾಗಿ ಈ ಅದ್ದೂರಿಯಿಂದ ಆಚರಣೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಶಿಕ್ಷಕ ಶಾಂತಾ ನಾಯಕ ಹೇಳಿದರು.

ಶಾಲಾ ಮುಖ್ಯಾಧ್ಯಾಪಕರಾದ ಗಂಗಾಧರ ಎಚ್ ಗೌಡ ಮಾತಾನಾಡಿ ಅದೇ ದಿನ ಸಂಜೆ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ನೆರವೇರಲಿದ್ದು,ನಂತರದಲ್ಲಿ ಶಾಲಾ ಮಕ್ಕಳಿಂದ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ ಗೌಡ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಲಿಂಗಾ ಗೌಡ,ಬಾಬು ಗೌಡ ಮುಂತಾದವರು ಉಪಸ್ಥಿತರಿದ್ದರು.


