ಕಾರವಾರ: ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲಾಪ್ರತಿಭೋತ್ಸವ-2025 ರ ಬಾಲಪ್ರತಿಭಾ ವಿಭಾಗದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಅಂಕೋಲಾ ತಾಲೂಕಿನ ಬೊಬ್ರುವಾಡದ ಉನ್ನತಿ ನಾಗೇಂದ್ರ ನಾಯ್ಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಬೆಳಗಾವಿಯಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಇವಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹೆಮ್ಮೆತರಲಿ ಎನ್ನುವುದು ಎಲ್ಲರ ಹಾರೈಕೆಯಾಗಿದೆ.

ಬೊಬ್ರುವಾಡದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 5 ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿರುವ ಉನ್ನತಿ ನಾಯ್ಕ ಅಕ್ಷತಾ ಹಾಗೂ ನಾಗೇಂದ್ರ ನಾಯ್ಕ ದಂಪತಿಗಳ ಪುತ್ರಿಯಾಗಿದ್ದಾಳೆ. ಕಳೆದ ನಾಲ್ಕು ವರ್ಷದಿಂದ ದಿನಕರ ಕಲಾ ನಿಕೇತನ ಸಂಗೀತ ಶಾಲೆಯಲ್ಲಿ ಸಂಗೀತ ಶಿಕ್ಷಕರಾದ ಮಾರುತಿ ನಾಯ್ಕರವರ ಬಳಿ ಸಂಗೀತಾಭ್ಯಾಸ ಮಾಡುತ್ತಿರುವ ಇವಳು, ಚಿಕ್ಕವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಅಪಾರ ಪ್ರೇಮಹೊಂದಿದ್ದಳು, ಹಾಗೆಯೇ ಅನೇಕಾರು ಕಾರ್ಯಕ್ರಮಗಳಲ್ಲಿ ತನ್ನ ಪುಟ್ಟ ಕಂಠಸಿರಿಯ ಮೂಲಕ ಜನಮೆಚ್ಚುಗೆಗಳಿಸಿದ ಇವಳು ದಿವಂಗತ ಸಾಹಿತಿ ವಿಷ್ಣು ನಾಯ್ಕ ಸಹೋದರ ಸಂಬಂಧಿ ಕೂಡ ಹೌದು.

ಉನ್ನತಿ ಸಾಧನೆಗೆ ಶಾಲೆಯ ಮುಖ್ಯಾಧ್ಯಾಪಕರಾದ ಜ್ಯೋತಿ ನಾಯಕ ಸೇರಿದಂತೆ ಶಿಕ್ಷಕವೃಂದ ಹಾಗೂ ಊರ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರುಮಾಡಲಿ ಎನ್ನುವುದು ಎಲ್ಲರ ಹಾರೈಕೆಯಾಗಿದೆ.


