ಅಂಕೋಲಾ: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆಗೆ ಎರಗಿದ್ದ ವಿಡಿಯೋ ವೈರಲ್ ಆಗಿದ್ದು ಹಾಡು ಹಗಲೇ ನಡೆದಿದ್ದ ಇಂತಹ ಕೃತ್ಯ ನೋಡಿ ಜನಸಾಮಾನ್ಯರು ಬೆಚ್ಚಿ ಬಿದ್ದಿದ್ದಾರೆ.ಹಾಗೆಯೇ ಗೋಪಾಲಕೃಷ್ಣ ನಾಯಕ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಪಾರಿ ನೀಡಿದ್ರಾ? ಎನ್ನುವ ಪ್ರಶ್ನೆ ಉದ್ಭವವಾಗಿದೆ ಎನ್ನಲಾಗಿದೆ.

ಹೌದು..ಮಾರ್ಚ್ 25 ಬುಧವಾರ ಬೆಳಿಗ್ಗೆ ಅಂಕೋಲಾ ಪಟ್ಟಣದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು ದುಷ್ಕರ್ಮಿಗಳ ಅಟ್ಟಹಾಸ ತಾಲೂಕಿನಾದ್ಯಂತ ಬೆಚ್ಚಿಬೀಳಿಸಿದ್ದು, ಗೋಪಾಲಕೃಷ್ಣ ನಾಯಕ ಅವರ ಮೇಲೆ ಕಟ್ಟು ಕಥೆಯೊಂದನ್ನ ಕಟ್ಟಿ ದುಷ್ಕರ್ಮಿಗಳಿಗೆ ಸುಪಾರಿ ನೀಡಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿದೆ ಎನ್ನಲಾಗಿದೆ.

ದುಷ್ಕರ್ಮಿಗಳ ಸಂಭಾಷಣೆಯಲ್ಲಿ ದೊರೆತಿದೆ ಮಹತ್ವದ ಸುಳಿವು!
ಹತ್ಯೆಗೆ ಮುಂದಾಗಿದ್ದ ತಂಡದ ಸದಸ್ಯರು ನಾಯಕ್ ಅವರ ಮೇಲೆ ಏಕಾಏಕಿ ಮುಗಿಬಿದ್ದಿದ್ದು,ರಾಡ್ ಹಾಗೂ ಚಾಕುವಿನಿಂದ ಮನಬಂದಂತೆ ಚುಚ್ಚಲು ಪ್ರಯತ್ನಿಸುತ್ತಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಂತರ ಗೋಪಾಲಕೃಷ್ಣ ನಾಯಕ ತಪ್ಪಿಸಿಕೊಂಡು ಹಣಕಾಸು ಸಂಸ್ಥೆಯೊಂದರ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು,ಹತ್ಯೆಮಾಡಲು ವಿಫಲರಾಗಿದ್ದ ತಂಡ ನಡೆದುಕೊಂಡೇ ವೆಂಕಟರಮಣ ದೇವಸ್ಥಾನದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ಬಳಿ ಅವರು ತಂಗಿದ್ದ ಹೋಟೆಲ್ ಗೆ ತೆರಳುವ ಮದ್ಯೆ ಮಾಡಿದ್ದ ಫೋನ್ ಸಂಭಾಷಣೆ ಪ್ರಕರಣಕ್ಕೆ ಮಹತ್ತರ ಟ್ವಿಸ್ಟ್ ನೀಡಿದೆ.

ದುಷ್ಕರ್ಮಿಯೊಂದಿಗೆ ಮಾತನಾಡಿದ್ದು ಯಾರು ಎನ್ನುವುದನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ. ಹಾಗೆಯೇ ಸ್ಥಳೀಯ ಟ್ಯಾಕ್ಸಿಯಲ್ಲಿ ಪರಾರಿಯಾಗಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಮಾಜಾಳಿ ಚೆಕ್ ಪೋಸ್ಟ್ ಬಳಿ ಬಂಧಿಸಲಾಗಿದ್ದು, ನಾಯಕ ಹತ್ಯೆಯ ಸಂಚಿನ ಕುರಿತು ದುಷ್ಕರ್ಮಿಗಳಿಂದ ಹಲವಾರು ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು ತಂಡ ತಂಡವಾಗಿ ಪ್ರಕರಣವನ್ನು ಭೇದಿಸಲು ಪ್ಲಾನ್ ರೂಪಿಸಿದ್ದಾರೆ.

ಹತ್ಯೆಗೆ ಸುಪಾರಿ ನೀಡಿದವನಿಗೆ ಸರ್ಚ್! ನಾಯಕ್ ಮೇಲೆ ವ್ಯವಸ್ಥಿತ ಸಂಚು!
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರನ್ನು ಪ್ರಕರಣ ನಡೆದ ಎರಡೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ಮತ್ತಿರ್ವರಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ,ಆದರೆ ಹತ್ಯೆಗೆ ಸುಪಾರಿ ನೀಡಿದವನಿಗೂ ಬಲೆ ಬಿಸಿರುವ ಪೊಲೀಸರು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸುಪಾರಿ ನೀಡಿದವರು ಗೋಪಾಲಕೃಷ್ಣ ನಾಯಕ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹಂತಕರಿಗೆ ಸುಪಾರಿ ನೀಡಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು ಎನ್ನಲಾಗಿದೆ.


