ಕಾರವಾರ: ರವಿವಾರ ಬೆಳಗಿನ ವೇಳೆ ಅರಬ್ಬೀ ಸಮುದ್ರದ ಅಂಜದೀವ್ ದ್ವೀಪದ ಸಮೀಪ ಮೀನುಗಾರಿಕಾ ಬೋಟ್ವೊಂದು ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಬೋಟ್ನಲ್ಲಿದ್ದ 25 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಡೆದಿದ್ದೇನು?
ಬೆಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬೋಟ್ ಹಠಾತ್ತನೆ ಮುಳುಗಡೆಯಾಗಲಾರಂಭಿಸಿದ ತಕ್ಷಣವೇ ಎಚ್ಚೆತ್ತ ಮೀನುಗಾರರು ನೆರವಿಗಾಗಿ ಮೊರೆಯಿಟ್ಟಿದ್ದಾರೆ. ಕೂಡಲೇ ಸಮೀಪದಲ್ಲಿದ್ದ ಐದು ಇತರ ಮೀನುಗಾರಿಕಾ ಬೋಟ್ಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಎಲ್ಲ 25 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
70 ಲಕ್ಷಕ್ಕೂ ಅಧಿಕ ನಷ್ಟ, ಬೋಟ್ ರಕ್ಷಣೆಗೆ ಯತ್ನ
ಮುಳುಗಡೆಯಾಗುತ್ತಿದ್ದ ‘ಶ್ರೀ ಮಾತಾ’ ಬೋಟ್ ಅನ್ನು ಉಳಿಸಿಕೊಳ್ಳಲು ಇತರೆ ಬೋಟ್ಗಳ ಸಹಾಯದಿಂದ ಹಗ್ಗ ಕಟ್ಟಿ ರಕ್ಷಿಸುವ ಭಾರಿ ಪ್ರಯತ್ನವೂ ನಡೆದಿದೆ. ಆದರೆ, ಈ ಅವಘಡದಿಂದ ಬೋಟ್ ಹಾಗೂ ಅದಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಪರಿಕರಗಳಿಗೆ ತೀವ್ರ ಹಾನಿಯಾಗಿದ್ದು, ಬರೋಬ್ಬರಿ 70 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಯಿಂದಾಗಿ ಮೀನುಗಾರ ಸಮುದಾಯದಲ್ಲಿ ಆತಂಕ ಮನೆಮಾಡಿದ್ದು, ಬೋಟ್ ಮುಳುಗಡೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಮೂರನೇ ಬಾರಿಗೆ ಸಂಕಷ್ಟಕ್ಕೆ ಸಿಲುಕಿದ ಮಾಲೀಕ
ಸ್ಥಳೀಯರ ಮಾಹಿತಿಯ ಪ್ರಕಾರ, ಬೋಟ್ ಮಾಲೀಕ ನೀಲಕಂಠ ಖಾರ್ವಿ ಅವರ ಪಾಲಿಗೆ ಇದು ಮೂರನೇ ಆಘಾತವಾಗಿದೆ. ಈ ಹಿಂದೆ ಅವರ ಮೊದಲ ಬೋಟ್ ಕೂಡ ಅವಘಡಕ್ಕೀಡಾಗಿ ಹಾನಿಗೊಳಗಾಗಿತ್ತು. ಆ ಬಳಿಕ ಖರೀದಿಸಿದ್ದ ಎರಡನೇ ಬೋಟ್ ಕೂಡ ಇದೇ ರೀತಿ ಹಾನಿಗೀಡಾಗಿತ್ತು. ಇದೀಗ ಆರ್ಥಿಕವಾಗಿ ಚೇತರಿಸಿಕೊಳ್ಳುವ ಮುನ್ನವೇ ಮೂರನೇ ಬೋಟ್ ಕೂಡ ಸಮುದ್ರಪಾಲಾಗಿರುವುದು ಅವರ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ.
ಪರಿಹಾರಕ್ಕೆ ಮೀನುಗಾರರ ಆಗ್ರಹ
ಪದೇಪದೇ ಬೋಟ್ಗಳು ಅವಘಡಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಗಳು ಭಾರಿ ಆರ್ಥಿಕ ನಷ್ಟ ಅನುಭವಿಸುತ್ತಿವೆ. ಪ್ರಕೃತಿ ವಿಕೋಪ ಹಾಗೂ ಇತರೆ ಕಾರಣಗಳಿಂದ ಉಂಟಾಗುವ ಇಂತಹ ಅವಘಡಗಳ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಬೇಕು ಮತ್ತು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
