Spread the love

ಶಿರಸಿ: ತಾಲ್ಲೂಕಿನ ಬನವಾಸಿಯಿಂದ ದಾಸನಕೊಪ್ಪ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ರಸ್ತೆ ಗುಂಡಿಯ ಅವಾಂತರಕ್ಕೆ ಮಹಿಳೆಯೊಬ್ಬರು ಅಪಘಾತಕ್ಕೊಳಗಾಗಿದ್ದು, ದ್ವಿಚಕ್ರ ವಾಹನದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡಗೋಡು ಕ್ರಾಸ್ ಸಮೀಪ ಸೋಮವಾರ ನಡೆದಿದೆ.

ತಿರುವಿನಲ್ಲಿ ಕಾಣದ ಗುಂಡಿ: ಹಾರಿ ಬಿದ್ದ ಮಹಿಳೆ 

ರಾತ್ರಿ ಸುಮಾರು 8 ಗಂಟೆಯ ವೇಳೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಕರು ತೆರಳುತ್ತಿದ್ದರು. ಈ ವೇಳೆ ಕಡಗೋಡು ಕ್ರಾಸ್ ಬಳಿಯ ರಸ್ತೆ ತಿರುವಿನಲ್ಲಿದ್ದ ಬೃಹತ್ ಗುಂಡಿ ಸವಾರರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ವೇಗವಾಗಿ ಬಂದ ಸ್ಕೂಟಿ ನೇರವಾಗಿ ಗುಂಡಿಗೆ ಇಳಿದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿಯ ಹಿಂಬದಿ ಕುಳಿತಿದ್ದ ಮಹಿಳೆ ನಿಯಂತ್ರಣ ತಪ್ಪಿ ಗಾಳಿಯಲ್ಲಿ ಹಾರಿ ಗುಂಡಿಯೊಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಅಪಘಾತವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಗಾಯಾಳು ಮಹಿಳೆಯನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ 

ಬನವಾಸಿ–ದಾಸನಕೊಪ್ಪ ರಸ್ತೆಯುದ್ದಕ್ಕೂ ಹಲವೆಡೆ ಅಪಾಯಕಾರಿ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಜೀವಭಯ ಕಾಡುತ್ತಿದೆ. ವಿಶೇಷವಾಗಿ ಈ ರಸ್ತೆಯ ಪರಿಚಯವಿಲ್ಲದ ಹೊರಗಿನ ವಾಹನ ಸವಾರರು ಪ್ರತಿದಿನ ಅಪಾಯಕ್ಕೆ ಸಿಲುಕುವಂತಾಗಿದೆ ಎಂದು ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 

“ರಸ್ತೆ ಸುರಕ್ಷತೆಯನ್ನು ಕಾಪಾಡಬೇಕಾದ ಲೋಕೋಪಯೋಗಿ ಇಲಾಖೆ (PWD) ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇನ್ಯಾವ ದೊಡ್ಡ ಅನಾಹುತಕ್ಕಾಗಿ ಕಾಯುತ್ತಿದ್ದಾರೆ?” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *