ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಭಾರೀ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿದ ವಂಚಕರ ಜಾಲಕ್ಕೆ ಸಿಲುಕಿ, ಸಿದ್ದಾಪುರ ಪಟ್ಟಣದ ನಿವಾಸಿ ಹಾಗೂ ಸರ್ಕಾರಿ ನೌಕರರಾಗಿರುವ ಮಂಜಪ್ಪ ತಿಪ್ಪೆಸ್ವಾಮಿ (41) ಅವರು ಬರೋಬ್ಬರಿ 20,72,580 ರೂ. ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಅಪರಿಚಿತ ವಂಚಕರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಹಂತ ಹಂತವಾಗಿ 20.72 ಲಕ್ಷ ರೂ. ವರ್ಗಾವಣೆ
ಆರೋಪಿಗಳು ಮಂಜಪ್ಪ ಅವರನ್ನು ಆನ್ಲೈನ್ ಟ್ರೇಡಿಂಗ್ ಪ್ಲಾಟ್ಫಾರ್ಮ್ಗೆ ಸೇರಿಸಿಕೊಂಡು, ಹಣ ಹಾಕಿದರೆ ಡಬಲ್ ಆಗುತ್ತದೆ ಎಂದು ಆಮಿಷವೊಡ್ಡಿದ್ದರು. ಇದನ್ನು ನಂಬಿದ ಮಂಜಪ್ಪ ಅವರು, 02-07-2025 ರಿಂದ 11-06-2026 ರ ನಡುವಿನ ಅವಧಿಯಲ್ಲಿ ತಮ್ಮ ಆಕ್ಸಿಸ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಖಾತೆಗಳಿಂದ PhonePe ಮತ್ತು ಯುಪಿಐ (UPI) ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ.
ಆಕ್ಸಿಸ್ ಬ್ಯಾಂಕ್ನಿಂದ ಒಟ್ಟು 14,33,200 ರೂ. ಮತ್ತು 2,80,000 ರೂ.
ಬ್ಯಾಂಕ್ ಆಫ್ ಬರೋಡಾದಿಂದ 79,000 ರೂ., ಇತರ ವಹಿವಾಟುಗಳ ಮೂಲಕ 2,80,380 ರೂ. ಸೇರಿ ಒಟ್ಟಾರೆ 20,72,580 ರೂಪಾಯಿಗಳನ್ನು ವಂಚಕರ ಖಾತೆಗೆ ಜಮೆ ಮಾಡಿದ್ದಾರೆ.
ಹಣ ವಿತ್ಡ್ರಾ ಮಾಡಲು ಹೋದಾಗ ವಂಚನೆ ಬಯಲಿಗೆ
ಹಣದ ಅಡಚಣೆ ಎದುರಾದಾಗ ಮಂಜಪ್ಪ ಅವರು ಆನ್ಲೈನ್ ಟ್ರೇಡಿಂಗ್ ಖಾತೆಯಿಂದ ಹಣ ಹಿಂಪಡೆಯಲು (Withdraw) ಯತ್ನಿಸಿದ್ದಾರೆ. ಆದರೆ, ಹಣ ವಿತ್ಡ್ರಾ ಆಗದಿದ್ದಾಗ ತಾನು ಸಂಪೂರ್ಣವಾಗಿ ಮೋಸ ಹೋಗಿರುವುದು ಅವರ ಅರಿವಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಅವರು ಸೈಬರ್ ಕ್ರೈಮ್ ಸಹಾಯವಾಣಿ 1930 ಪೋರ್ಟಲ್ಗೆ ದೂರು ನೀಡಿದ್ದು, ಮೂರು ಬಾರಿ (ಅಕ್ಟೋಬರ್ 2025, ನವೆಂಬರ್ 2025 ಹಾಗೂ ಜೂನ್ 2026 ರಲ್ಲಿ) ದೂರು ಸ್ವೀಕೃತಿ ಸಂಖ್ಯೆಯನ್ನು ಪಡೆದುಕೊಂಡಿದ್ದರು.
ಸೈಬರ್ ಕ್ರೈಮ್ ಅಧಿಕಾರಿಗಳೇ ತಾವೇ ಖುದ್ದಾಗಿ ಹಣ ವಾಪಸ್ ಕೊಡಿಸುತ್ತಾರೆ ಎಂದು ನಂಬಿ ಅವರು ಪೊಲೀಸ್ ಠಾಣೆಗೆ ದೂರು ನೀಡದೆ ಸುಮ್ಮನಿದ್ದರು. ಆದರೆ, ಠಾಣೆಗೆ ಬಂದು ಅಧಿಕೃತ ದೂರು ನೀಡುವುದು ಅವಶ್ಯಕ ಎಂದು ತಿಳಿದ ಬಳಿಕ, ಆಗಸ್ಟ್ 19 ರಂದು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿ ಲಿಖಿತ ದೂರು ನೀಡಿದ್ದಾರೆ.
ಬಿಎನ್ಎಸ್ ಹಾಗೂ ಐಟಿ ಕಾಯ್ದೆಯಡಿ ಎಫ್ಐಆರ್ ದಾಖಲು
ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವ ಹಿನ್ನೆಲೆಯಲ್ಲಿ, ದೂರುದಾರರು ನೀಡಿದ ಗಣಕೀಕೃತ ಮಾಹಿತಿಯ ಆಧಾರದ ಮೇಲೆ ಸಿದ್ದಾಪುರ ಠಾಣಾ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 319(2), 318(4) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (IT Act) ಕಲಂ 66(D) ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
