Spread the love

ಮಲೆನಾಡಿನ ಸಾಂಪ್ರದಾಯಿಕ ಹಾಗೂ ಅತ್ಯಂತ ಸಂಭ್ರಮದ ಆಚರಣೆಯಾದ ‘ಕೆರೆ ಬೇಟೆ’ ಶಿರಸಿ ತಾಲೂಕಿನ ಉಲ್ಲಾಳ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಆರಾಧ್ಯ ದೈವ ಶ್ರೀ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ನಿಧಿ ಸಂಗ್ರಹಿಸುವ ಸದುದ್ದೇಶದಿಂದ ಗ್ರಾಮಸ್ಥರು ಈ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೇಸಿಗೆಯ ಬಿರುಬಿಸಿಲಿನ ನಡುವೆಯೂ ನೂರಾರು ಮಂದಿ ಈ ಸಂಭ್ರಮದಲ್ಲಿ ಪಾಲ್ಗೊಂಡು ಕೆರೆಯಲ್ಲಿ ಮೀನು ಹಿಡಿಯುವ ಮೂಲಕ ಮಲೆನಾಡಿನ ವಿಶಿಷ್ಟ ಪರಂಪರೆಯನ್ನು ಕಣ್ತುಂಬಿಕೊಂಡರು.

ಈ ಬಾರಿಯ ಕೆರೆ ಬೇಟೆಯಲ್ಲಿ ಪಾಲ್ಗೊಳ್ಳಲು ಆಸಕ್ತರಿಗೆ ಒಂದು ಕುಣಿಗೆ (ಮೀನು ಹಿಡಿಯುವ ಸಾಂಪ್ರದಾಯಿಕ ಸಾಧನ) 500 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಸ್ಥಳೀಯರು ಮಾತ್ರವಲ್ಲದೆ ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದಲೂ ಆಗಮಿಸಿದ್ದ ಸುಮಾರು 160 ಕ್ಕೂ ಹೆಚ್ಚು ಕುಣಿದಾರರು ಈ ಮೀನುಗಾರಿಕಾ ಉತ್ಸವದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಉಲ್ಲಾಳ ಕೆರೆಯಲ್ಲಿ ಪಾರಂ, ಕಟ್ಲಾ ಹಾಗೂ ಗ್ರಾಸ್ಕರ್ ಸೇರಿದಂತೆ ವಿವಿಧ ತಳಿಯ ಮೀನು ಮರಿಗಳನ್ನು ಬಿಟ್ಟು ಬಹಳ ಜತನದಿಂದ ಸಂರಕ್ಷಿಸಿ ಬೆಳೆಸಲಾಗಿತ್ತು. ಕೆರೆಗಿಳಿದು ಭರ್ಜರಿ ಬೇಟೆ ಆರಂಭಿಸಿದವರ ಪೈಕಿ ಕೆಲವರ ಕುಣಿಗೆ ದೊಡ್ಡ ಪ್ರಮಾಣದಲ್ಲಿ ಮೀನುಗಳು ಬಿದ್ದರೆ, ಇನ್ನು ಕೆಲವರಿಗೆ ನಿರೀಕ್ಷೆಗಿಂತ ಕಡಿಮೆ ಮೀನುಗಳು ಲಭ್ಯವಾದವು.

ಬಿದಿರು ಮತ್ತು ಕಬ್ಬಿಣದ ತಂತಿಯಿಂದ ಹೆಣೆದು ಮಾಡಿದ ಸಾಂಪ್ರದಾಯಿಕ ಕುಣಿಗಳನ್ನು ಹಿಡಿದು ಕುಣಿದಾರರು ಒಟ್ಟಾಗಿ ಕೆರೆಯೊಳಗೆ ಇಳಿದು ಮೀನು ಹಿಡಿಯುವ ದೃಶ್ಯಗಳು ನೋಡುಗರ ಕಣ್ಮನ ಸೆಳೆಯುವಂತಿದ್ದವು. ಯಾವುದೇ ಗದ್ದಲಗಳಿಲ್ಲದೆ ಅತ್ಯಂತ ಶಾಂತಯುತವಾಗಿ ನಡೆದ ಈ ಕೆರೆ ಬೇಟೆ ಕಾರ್ಯಕ್ರಮವು ಮಲೆನಾಡಿನ ಸುಂದರ ಪರಂಪರೆ ಹಾಗೂ ಗ್ರಾಮೀಣ ಸೊಗಡು ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಬೇಸಿಗೆ ಕಾಲದಲ್ಲಿ ಕೆರೆಗಳ ನೀರಿನ ಮಟ್ಟ ಕಡಿಮೆಯಾದಾಗ ಈ ರೀತಿಯ ಮೀನು ಹಿಡಿಯುವ ಕೆರೆ ಬೇಟೆ ಆಚರಣೆಗಳು ಮಲೆನಾಡಿನ ಹಲವು ಗ್ರಾಮಗಳಲ್ಲಿ ಇಂದಿಗೂ ಅಷ್ಟೇ ಸಂಭ್ರಮದಿಂದ ನಡೆಯುತ್ತಿರುವುದು ವಿಶೇಷವಾಗಿದೆ.

Leave a Reply

Your email address will not be published. Required fields are marked *